🌹ಮೇಘದೂತದ ಒಂದು ಬಿಂದು 🌹

*त्वय्यायत्तं कृषिफलमिति भ्रूविकारानभिज्ञै: प्रीतिस्निग्धैर्जनपदवधूलोचनै: पीयमान: सद्यस्सीरोत्कषणसुरभि क्षेत्रमारुह्य मालं किॆञ्चित्पश्चाद्व्रज लघुगतिर्भूय एवोत्तरेण ।।*

_ಎಲೈ ಮೇಘವೇ, ಕೃಷಿಯಲ್ಲಿನ ಫಲವು ನಿನ್ನನ್ನು ಅವಲಂಬಿಸಿದೆ ಎಂಬ ಕಾರಣದಿಂದ, ನಿನ್ನ ಮೇಲೆ ಹೆಚ್ಚಿನ ಪ್ರೀತಿಯುಳ್ಳ , ಕಡೆಗಣ್ಣಿನ ನೋಟಬೀರಿ ವಂಚಿಸಲು ಅರಿಯದ  ಹಳ್ಳಿಯ ಮುಗುದೆಯರ ಕಣ್ಣುಗಳಿಂದ ನೋಡಲ್ಪಟ್ಟವನಾಗಿ ಅಥವಾ ಅವರ ನೋಟದಿಂದಲೇ ಕುಡಿಯಲ್ಪಟ್ಟವನಾಗಿ( ತುಂಬಾ ಆಸಕ್ತಿಯಿಂದ ನೋಡುತ್ತಿದ್ದರೆ ತಿಂದುಬಿಡುವಂತೆ ನೋಡುತ್ತಿದ್ದಾನೆ ಎನ್ನುವುದಿಲ್ಲವೇ ಹಾಗೇ ಇಲ್ಲಿ ಕುಡಿದುಬಿಡುವಂತೆ ನೋಟ ಬೀರುತ್ತಿದ್ದಾರೆ ಮೇಘದೆಡೆ ಮಳೆ ಸುರಿಸುವನೆಂದು) ಸಂತೋಷಪಡುವೆ. ಆ ಪ್ರದೇಶವಾದರೋ ಈಗಷ್ಟೇ ನೇಗಿಲಿನಿಂದ ಭೂಮಿಯು ಉಳಲ್ಪಟ್ಟ ಕಾರಣ ಆ ಮಣ್ಣಿನ ಸುವಾಸನೆಯಿಂದ ಕೂಡಿರುತ್ತದೆ. ಮಾಲವೆಂಬ ಆ ಸ್ಥಳದಲ್ಲಿ ಪರಿಮಳವನ್ನು ಆಸ್ವಾದಿಸುತ್ತಾ ಎತ್ತರದ ಬಯಲು ಪ್ರದೇಶವನ್ನು ಏರಿ ಸ್ವಲ್ಪ ಪಶ್ಚಿಮಕ್ಕೆ ಶೀಘ್ರ ಗತಿಯಲ್ಲಿ ಹೋಗಿ ಮುಂದೆ ಉತ್ತರದಿಕ್ಕಿನಲ್ಲೇ ನಿನ್ನ ಪಯಣವನ್ನು ಮುಂದುವರೆಸು. ಕೃಷಿಯನ್ನು ಮಳೆ ತರುವ ಮೋಡಗಳೊಡನೆ ಆಡುವ ಜೂಜಾಟವೆಂದಿದ್ದಾರೆ ಅರ್ಥಶಾಸ್ತ್ರಜ್ಞರು. ಹಾಗಾಗಿ ಮಳೆ ಬಂದರೆ ಮಾತ್ರ ಉತ್ತು ಬಿತ್ತಿದ ಬೀಜ ಮೊಳಕೆಯೊಡೆದು ಪಲ ಕೈಗೆ ಬರಲು ಸಾಧ್ಯ. ಇಲ್ಲದಿದ್ದರೆ ಮಾಡಿದ ಪ್ರಯತ್ನವೆಲ್ಲ ಹೊಳೆ ನೀರಲ್ಲಿ ಹುಣಸೆಹುಳಿ ತೊಳೆದಂತೆ ವ್ಯರ್ಥ. ಅದಕ್ಕಾಗಿಯೇ ಆಸೆ ತುಂಬಿದ ಬಟ್ಟಲುಕಂಗಳಿಂದ ನಿನ್ನೆಡೆಗೆ ಪ್ರೀತಿ ತುಂಬಿದ ನೋಟ ಬೀರುವರು ಹಳ್ಳಿಯ ಪ್ರದೇಶದ ಲಲನೆಯರು. ಅವರಿಗೆ ನಗರದ ಮಾನಿ-ನಿಯರಂತೆ ವಕ್ರನೋಟ ಬೀರಲು ತಿಳಿಯದು. ಮುಗ್ಧರು ಅವರು. ಅವರ ಆ ನೋಟವನ್ನು ಬಹುಕಾಲ ಆಸ್ವಾದಿಸುತ್ತಾ ಮಳೆ ಸುರಿಸುತ್ತಾ ನಿನ್ನನ್ನು ನೀನು ತಣ್ಣಗಾಗಿಸುತ್ತಾ ಮುಂದುವರೆ. ಆ ಮಾಲವೆಂಬ ಪ್ರದೇಶದಲ್ಲಿ ಈಗ ತಾನೇ ಭೂಮಿಯನ್ನು ನೇಗಿಲಿನಿಂದ ಉತ್ತು ಹದಗೊಳಿಸುತ್ತಿರುವರು. ನಿನ್ನ ಮೈಯ ಹನಿ ಅಲ್ಲಿ ಬಿದ್ದಾಗ ಒಂದು ಆಕರ್ಷಕ ಘಮಲು ವಾತಾವರಣದಲ್ಲಿ ಹರಡುತ್ತದೆ. ( ಮೊದಲ ಮಳೆಗೆ ಸುತ್ತಲೂ ಒಂದು ಕಂಪು ಹರಡುತ್ತದೆ. ಅದನ್ನು ಆಸ್ವಾದಿಸುವುದೇ ಒಂದು ಸುಂದರ ಅನುಭವ.) ಅದನ್ನು ಸವಿಯುತ್ತಾ ಮುಂದೆ ನೇರವಾಗಿ ಹೋಗದೇ ಮಾಲವೆಂಬ ಎತ್ತರದ ಬಯಲು ಪ್ರದೇಶವನ್ನೇರಿ ಹಗುರ ಮಾಡಿಕೊಂಡು ಸ್ವಲ್ಪ ಪಶ್ಚಿಮಕ್ಕೆ ಹೋಗಿ ಮುಂದೆ ಉತ್ತರದಲ್ಲಿ ಮುಂದುವರೆ.( ನಾವೂ ಮಾರ್ಗ ತೋರುವಾಗ ಸ್ವಲ್ಪ ತಿರುಗಿ ಮತ್ತೆ ಮುಂದೆ ನೇರ ಹೋಗಿ ಎನ್ನುವುದಿಲ್ಲವೇ ಹಾಗೇ ಯಕ್ಷನ ಮಾರ್ಗದರ್ಶನ) ಮನುಷ್ಯ ಹಗುರವಾದಷ್ಟೂ ಅವನ ಪಯಣ ಮುಂದೆ ಮುಂದೆ ಸಾಗಲು ಅನುಕೂಲ. ಅಹಂಕಾರ, ಸಿಟ್ಟು, ಲೋಭ, ಅತಿಯಾದ ವ್ಯಾಮೋಹ ತುಂಬಿಕೊಂಡಿದ್ದಾಗ ಎಷ್ಟು ಎತ್ತರ ಏರಿರುತ್ತೇವೆಯೋ ಅಲ್ಲೇ ನಿಂತುಬಿಡುತ್ತೇವೆ. ಅದನ್ನೇ ಮೋಡ ಮಳೆ ಸುರಿಸಿ ಹಗುರವಾಗಿ ಮುಂದುವರೆಯುವ ದೃಷ್ಟಾಂತದ ಮೂಲಕ ಸೂಚಿಸುತ್ತಿದ್ದಾನೆ. ಮಲ್ಲಿನಾಥನೆಂಬ ವ್ಯಾಖ್ಯಾನಕಾರ ಬೇರೆ ವಿಷಯವನ್ನೂ ಹೇಳಿದ್ದಾನೆ. ಹೇಗೆ ಒಬ್ಬ ಬಹುಪತ್ನಿವಲ್ಲಭ ವಕ್ರಮಾರ್ಗಗಳಲ್ಲಿ ಸಂಚರಿಸಿ ಪತ್ನಿಯರನ್ನು ಪ್ರೇಯಸಿಯರನ್ನು ಸಂಧಿಸುತ್ತಾ ಮತ್ತೆ ನಿಜವಾದ ದಾರಿಗೆ ಹಿಂದಿರುಗಿ ಮುನ್ನಡೆಯುವನೋ ಹಾಗೇ ಮುಂದುವರೆಸು ಎಂಬುದಾಗಿ._

📜 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩