ರಾಮಾಯಣ ೧೫೨
📖🏝ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೧೫೨🏝📖 *ನಾಲ್ಪಸನ್ನಿಚಯಃ ಕಶ್ಚಿದಾಸೀತ್ತಸ್ಮಿನ್ಪುರೋತ್ತಮೇ | ಕುಟುಂಬೀ ಯೋ ಹ್ಯಸಿದ್ಧಾರ್ಥೋ ಗವಾಶ್ವಧನಧಾನ್ಯವಾನ್ || ಕಾಮೀ ವಾ ನ ಕದರ್ಯೋ ವಾ ನೃಶಂಸಃ ಪುರುಷಃ ಕ್ವಚಿತ್ | ದ್ರಷ್ಟುಂ ಶಕ್ಯಮಯೋಧ್ಯಾಯಾಂ ನಾವಿದ್ವಾನ್ನ ಚ ನಾಸ್ತಿಕಃ ||* _ಅಯೋಧ್ಯೆಯಲ್ಲಿ ಎಂತಹ ಜನರಿದ್ದರೆಂಬ ವರ್ಣನೆ ಇಲ್ಲಿದೆ. ಆ ನಗರದಲ್ಲಿ ಅಲ್ಪಧನದಿಂದ ಕಷ್ಟಪಟ್ಟು ಜೀವನ ಸಾಗಿಸುವ ಒಬ್ಬರೂ ಇರಲಿಲ್ಲ. ಸಾಕಷ್ಟು ಧನಸಂಪತ್ತು ಜನರ ಬಳಿಯಲ್ಲಿತ್ತು. ಧನವೇ ಮುಖ್ಯವಾಗಿ ತೃಪ್ತಿ ಹೇತು. ಅದೇ ಸಾಕಷ್ಟಿದ್ದರೆ ಜನರು ಸದಾ ಸುಖಿಗಳು. ಬಹುಶಃ ಬಡಬ್ರಾಹ್ಮಣರು ಅಥವಾ ದೀನರು ಎಂಬ ಪದ ಅಯೋಧ್ಯೆಯಲ್ಲಿ ಮಾಯವಾಗಿತ್ತು. ಧರ್ಮ-ಅರ್ಥ-ಕಾಮಗಳನ್ನು ಸಾಧಿಸದ, ಗೋ-ಅಶ್ವ-ಧನ-ಧಾನ್ಯ ಮೊದಲಾದ ಸಂಪತ್ತಿಲ್ಲದ ಕುಟುಂಬಿ ಒಬ್ಬರೂ ಇರಲಿಲ್ಲ. ಕುಟುಂಬಿ ಎಂದರೆ *ಮಾತಾ ಪಿತಾ ಸ್ನುಷೇ ಪುತ್ರೌ ಪುತ್ರೀ ಪತ್ನ್ಯತಿಥಿಃ ಸ್ವಯಮ್ |ದಶಸಂಖ್ಯಃ ಕುಟುಂಬೀ* ಎಂಬಂತೆ ತಾಯಿ-ತಂದೆ-ಇಬ್ಬರು ಸೊಸೆಯರು-ಇಬ್ಬರು ಗಂಡುಮಕ್ಕಳು-ಮಗಳು-ಪತ್ನಿ- ಅತಿಥಿ ಮತ್ತು ಯಜಮಾನ. ಇವರು ಸಮೃದ್ಧವಾಗಿ ಬದುಕಲು ಬೇಕಾದ ಎಲ್ಲಾ ಸೌಕರ್ಯಗಳು ಅಯೋಧ್ಯೆಯಲ್ಲಿ ಬಹುಕಾಲದಿಂದ ನೆಲೆಸಿದ್ದವು. ಹಿಂದೆ ಗೋವನ್ನೂ ಮುಖ್ಯ ಸಂಪತ್ತಾಗಿ ಪರಿಗಣಿಸುತ್ತಿದ್ದರು. ಯುದ್ಧದ ದೃಷ್ಟಿಯಿಂದ ಅಶ್ವಗಳು ಒಂದು ಸಂಪತ್ತು. ಧನ ಧಾನ್ಯ ಸಾರ್ವಕಾಲಿಕ ಸಾರ್ವದೇಶಿಕ ಸಂಪತ್ತು. ಇವಿಷ್ಟಿದ್ದರೂ ಧರ್...