ರಾಮಾಯಣ ೮೫
📕🌳 ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು 🌳📕 ಭಾಗ- ೮೫
*ಭ್ರಷ್ಟಶ್ರೀಕ ಗತೈಶ್ವರ್ಯ ಮುಮೂರ್ಷೋ ನಷ್ಟಚೇತನಃ*
_ರಾಮನ ಮಾತು. ಯುದ್ಧಕ್ಕೆ ಸನ್ನದ್ಧನಾದ ಮೇಲೆ ಕೊನೆಯ ಪ್ರಯತ್ನವೆಂದು ಅಂಗದನನ್ನು ರಾವಣನ ಬಳಿ ಕಳುಹಿಸುತ್ತಾನೆ. ರಾವಣನನ್ನು ಕುರಿತು ಈ ಮಾತುಗಳನ್ನು ಹೇಳುವಂತೆ ಆಜ್ಞಾಪಿಸುತ್ತಾನೆ. ರಾವಣ, ನಿನ್ನ ಸಂಪತ್ತು ಗತಿಸುತ್ತಿದೆ. ಪ್ರಭುತ್ವವು ನಷ್ಟವಾಗುತ್ತಿದೆ. ಸಾಯುವ ಕಾಲ ಸಮೀಪಿಸಿದೆ. ಆದ್ದರಿಂದಲೇ ವಿವೇಕಭ್ರಷ್ಟನಾಗಿರುವೆ. ಇಷ್ಟು ಕಾಲ ದೇವ-ಋಷಿ-ಗಂಧರ್ವ- ಅಪ್ಸರೆ- ನಾಗ-ಯಕ್ಷ-ರಾಜರಿಗೂ ಸಾಮಾನ್ಯರಿಗೂ ವಿವೇಚನೆಯಿಲ್ಲದೆ ಬಗೆಬಗೆಯಲ್ಲಿ ದ್ರೋಹ ಮಾಡಿರುವೆಯಲ್ಲ. ಆ ಪಾಪಕರ್ಮದ ಘೋರ ಫಲವನ್ನು ಅನುಭವಿಸುವ ಕಾಲ. ಈಗ ಬಂದಿದೆ._
*ಮಾಮತಿಕ್ರಾಮಯಿತ್ವಾ ತ್ವಂ ಹೃತವಾಂಸ್ತದ್ವಿದರ್ಶಯ ಅರಾಕ್ಷಸಮಿಮಂ ಲೋಕಂ ಕರ್ತಾಸ್ಮಿ ನಿಶಿತೈಃ ಶರೈಃ*
_ಎಲೈ ಅಧಮ, ಮಾಯೆಯಿಂದ ನನ್ನನ್ನು ಆಶ್ರಮದಿಂದ ದೂರ ಹೋಗುವಂತೆ ಮಾಡಿ ಸೀತೆಯನ್ನು ಅಪಹರಿಸಿದೆಯಲ್ಲ, ಯಾವ ಮಾಯಾಬಲದ ಕೊಬ್ಬಿನಿಂದ ಆ ಕೃತ್ಯ ಮಾಡಿದೆಯೋ ಅದನ್ನು ಈಗ ತೋರಿಸು. ಮೈಥಿಲಿಯನ್ನು ಒಪ್ಪಿಸಿ ಶರಣಾಗದಿದ್ದಲ್ಲಿ ಈ ಲೋಕದಲ್ಲಿ ರಾಕ್ಷಸ ಜಾತಿಯೇ ಇಲ್ಲದಂತೆ ಮಾಡಿಬಿಡುವೆ. ಶರಣಾಗಲು ಇಷ್ಟವಿಲ್ಲದಿದ್ದರೆ ಬಂದು ಧೈರ್ಯದಿಂದ ಹೋರಾಡು. ನನ್ನ ಶರಗಳಿಂದ ಹತನಾಗಿ ಪ್ರಾಯಶ್ಚಿತ್ತ ಅನುಭವಿಸಿ ಪೂತನಾಗಬಹುದು. ನನ್ನ ಕಣ್ಣಿಗೆ ಬಿದ್ದಮೇಲೆ ಬದುಕುಳಿಯುವ ಆಸೆ ಬಿಟ್ಟು ಬಿಡು._
*ಬ್ರವೀಮಿ ತ್ವಾಂ ಹಿತಂ ವಾಕ್ಯಂ ಕ್ರಿಯತಾಮೌರ್ಧ್ವದೇಹಿಕಮ್ ಸದುಷ್ಟಾ ಕ್ರಿಯತಾಂ ಲಂಕಾ ಜೀವಿತಂ ತೇ ಮಯಿ ಸ್ಥಿತಮ್*
_ಇದಂತೂ ಮಾರ್ಮಿಕವಾದ ಮಾತು. ನಿನ್ನ ಅಪರಕ್ರಿಯೆಯನ್ನು ನೀನೇ ಮಾಡಿಕೊಂಡು ಬಿಡು. ತೃಪ್ತಿಯಾಗುವಂತೆ ಲಂಕೆಯನ್ನು ನೋಡಿಬಿಡು. ನಿನ್ನ ಪ್ರಾಣ ನನ್ನ ಮುಷ್ಟಿಯೊಳಗಿದೆ. ಹೆದರಿ ಹಕ್ಕಿಯಾಗಿ ಮನೋವೇಗದಿಂದ ಹಾರುತ್ತಾ ಮೂರುಲೋಕದಲ್ಲಿ ಅಡಗಿದರೂ ಉಳಿಸಲಾರೆ. ಹೀಗೆಲ್ಲಾ ಹೇಳಿ ಬರುವಂತೆ ಅಂಗದನನ್ನು ರಾಮನು ಕಳಿಸುತ್ತಾನೆ._
http://shreenidhiabhyankar.blogspot.in/
📕 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ