ಪ್ರತಿಜ್ಞಾ ಯೌಗಂಧರಾಯಣ ೧

🌒 ಪ್ರತಿಜ್ಞಾ ಯೌಗಂಧರಾಯಣ ಪರಿಚಯ 🌓

_ಭಾಸನ ನಾಟಕಗಳಲ್ಲಿ ಪ್ರಸಿದ್ಧವಾದ ನಾಟಕ. ಸ್ವಪ್ನವಾಸವದತ್ತದ ಪೂರ್ವಾರ್ಧವೆಂದು ನುಡಿಯುವರು ವಿದ್ವಾಂಸರು. ವರ್ಣನೆಯ ದೃಷ್ಟಿಯಿಂದ ಹೆಚ್ಚು ಅವಕಾಶ ಇಲ್ಲದಿದ್ದರೂ ಕಥೆ ಹೆಣೆಯುವಿಕೆಯ ರೀತಿ ಇಲ್ಲಿ ಆಕರ್ಷಕ. ಉಜ್ಜಯಿನಿಯ ದೊರೆ ಮಹಾಸೇನನು ವತ್ಸರಾಜನನ್ನು ಕಪಟ ತಂತ್ರದ ಮೂಲಕ ಅಪಹರಿಸುತ್ತಾನೆ. ಅನಂತರ ವತ್ಸರಾಜನಾದ ಉದಯನನು ಅಲ್ಲಿ ರಾಜನ ಮಗಳಿಗೆ ಸಂಗೀತಾದಿಗಳನ್ನು ಹೇಳಿಕೊಡುವ ಶಿಕ್ಷಕನಾಗಿ ಪಡುವ ಪಾಡು, ರಾಜನ ಮಗಳ ಜೊತೆಗೆ ನಡೆಯುವ ಪ್ರೇಮಾಂಕುರ, ಮುಂದೆ ಯೌಗಂಧರಾಯಣನೆಂಬ ಅವನ ಮಂತ್ರಿ ಮಹಾಸೇನನ ಕಪಟವನ್ನೇ ಆಶ್ರಯಿಸಿ ತನ್ನೊಡೆಯನನ್ನು ಬಿಡಿಸುವುದು ಮುಂತಾದ ಸನ್ನವೇಶಗಳ ಸುಂದರ ಚಿತ್ರಣ ಇಲ್ಲಿದೆ. ಸ್ವಾಮಿಯ ವಿಮೋಚನೆಗೆ ಯೌಗಂಧರಾಯಣನು ಸ್ವೀಕರಿಸುವ ಪ್ರತಿಜ್ಞೆಯೇ ನಾಟಕದ ಮುಖ್ಯವಸ್ತು. ಬೃಹತ್ಕಥೆಯ ಸಣ್ಣ ಕಥೆಯೊಂದನ್ನು ಎರಡು ನಾಟಕಗಳಾಗಿ ಭಾಸನು ರಚಿಸಿದ್ದಾನೆ. ಭಾಸನ ರಚನಾ  ಶೈಲಿ ಎಂದಿಗೂ ಸರಳ ಹಾಗೂ ನಿಜಜೀವನಕ್ಕೆ ಹತ್ತಿರವಿರುವಂತಹದು. ಅವಿಮಾರಕ ಹಾಗೂ ಪ್ರತಿಮಾನಾಟಕಗಳ ನಂತರ ಈ ನಾಟಕದ ಆಯ್ದ ಶ್ಲೋಕಗಳ ನನ್ನ ಮತಿಯ ಮಿತಿಗನುಸಾರವಾಗಿ ವಿವರಿಸುವ ಸಣ್ಣ ಪ್ರಯತ್ನ._

*पातु वासवदत्तायो महासेनोतिवीर्यवान् । वत्सराजस्तु  नाम्ना सशक्तिर्यौगन्धरायण: ।।*

_ನಾಟಕದ ಆರಂಭದ ಶ್ಲೋಕದಲ್ಲೇ ಕವಿ ಸಂಕ್ಷಿಪ್ತವಾಗಿ ಕಥೆ ಹಾಗೂ ಪಾತ್ರಗಳ ಪರಿಚಯ ಮಾಡಿದ್ದಾನೆ. ವಾಸವದತ್ತೆ  ಮಹಾಸೇನನ ಮಗಳು. ಇಲ್ಲಿ ವಾಸವ ಅಂದರೆ ಇಂದ್ರ, ಅವನಿಗೆ ಕೊಟ್ಟ ಜಯರೂಪವಾದ ಕಾಣಿಕೆ ಅದೇ ವಾಸವದತ್ತಾಯ. ಕಾಣಿಕೆ ಕೊಟ್ಟವನು ಮಹಾಸೇನ. ದೇವಸೈನ್ಯ ನಾಯಕನಾದ ಕಾರ್ತಿಕೇಯನು ತಾರಕಾಸುರನೊಡನೆ ಯುದ್ಧ ಮಾಡಿ ದೇವತೆಗಳಿಗೆ ಜಯ ದೊರಕಿಸಿ ಕೊಟ್ಟನು. ಆ ಷಣ್ಮುಖ ಮಹಾಪರಾಕ್ರಮಿಯೂ ಹೌದು. ಪ್ರಕೃತ ಮಹಾಸೇನ ಹೆಸರಿನ ರಾಜನು ತನ್ನ ಮಗಳಾದ ವಾಸವದತ್ತೆಯನ್ನು ಮಹಾವೀರನಾದ  ಉದಯನನಿಗೆ ಒಪ್ಪಿಸುವುದು ತಾತ್ಪರ್ಯ. ವತ್ಸರಾಜ ಎಂಬ ಪದಕ್ಕೆ ಕವಿ ಕಾರ್ತಿಕೇಯ ಎಂಬ ಅರ್ಥ ಮಾಡಿದ್ದಾನೆ. ಚಿಕ್ಕರಾಜ ಎಂಬ ಅರ್ಥದಲ್ಲಿ. ಗಣಪತಿ ಅವನ ಅಣ್ಣ , ಅವನು ಜ್ಯೇಷ್ಠರಾಜ. ಹಾಗೆ ವತ್ಸರಾಜ ಅಂದರೆ ಷಣ್ಮುಖ. ಅವನು ನಮ್ಮನ್ನು ರಕ್ಷಿಸಲಿ. ಆ ಸ್ಕಂದನು ಶಕ್ತಿಯಿಂದ ಅಂದರೆ ಆ ಹೆಸರಿನಿಂದ ಕೂಡಿರುವನು. ಯುಗಂಧರ ಅಂದರೆ ಮಿಥುನರೂಪೀ ಶಿವ. ಎಂದಿಗೂ ಪಾರ್ವತಿಯೊಡನಿರುವನು ಎಂಬ ಅರ್ಥದಲ್ಲಿ. ಅವನ ಪುತ್ರ ಯೌಗಂಧರಾಯಣ. ಪ್ರಕೃತ ನಾಟಕದಲ್ಲಿ ವತ್ಸರಾಜನ ಮಂತ್ರಿ ಯೌಗಂಧರಾಯಣನು ರಾಜನನ್ನು ರಕ್ಷಿಸಲಿ. ಶತ್ರುವಿನಿಂದ ಅಪಹೃತನಾಗಿದ್ದಾನೆ ಅವನ ರಾಜ ಉದಯನ. ಇನ್ನೊಂದು ಅರ್ಥ ಯುಗಂಧರ ಎಂದರೆ ಒಂದು ಪರ್ವತ. ಅಂತಹ ಪರ್ವತವಾಸೀ ಕಾರ್ತಿಕೇಯ ಎಂದು. ಕಾರ್ತಿಕೇಯನು ನಾಟಕದ ಆರಂಭದಲ್ಲಿ ಕವಿಯಿಂದ ಹೀಗೆ ಚಮತ್ಕಾರಿಕವಾಗಿ ಸ್ತುತಿಸಲ್ಪಟ್ಟಿದ್ದಾನೆ. ಮಹಾಸೇನ, ವತ್ಸರಾಜ,ವಾಸವದತ್ತೆ, ಯೌಗಂಧರಾಯಣ ಹೀಗೆ ನಾಲ್ಕು ಮುಖ್ಯ ಪಾತ್ರ ಪರಿಚಯವನ್ನು ಮಾಡಿರುವುದು ಕವಿಯ ನೈಪುಣ್ಯದ ಪರಿಚಯ._

🌸 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩