ಮಹಾಭಾರತ ೨೪

🔥📕 ಮಹಾಭಾರತದ ವಿಶೇಷ ಶ್ಲೋಕ ಹಾಗೂ ಮಾಹಿತಿಗಳು📕🔥 ಭಾಗ ೨೪

*ಯಥೇಂದ್ರಾಣೀ ಹರಿಹಯೇ ಸ್ವಾಹಾಚೈವ ವಿಭಾವಸೌ ರೋಹಿಣೀ ಚ ಯಥಾ ಸೋಮೇ ದಮಯಂತೀ ಯಥಾ ನಲೇ ಯಥಾ ವೈಶ್ರವಣೇ ಭದ್ರಾ ವಸಿಷ್ಠೇ ಚಾಪ್ಯರುಂಧತೀ ಯಥಾ ನಾರಾಯಣೋ ಲಕ್ಷ್ಮೀಸ್ತಥಾ ತ್ವಂ ಭವ ಭರ್ತೃಷು*

_ಮಹಾಭಾರತವನ್ನು ಪಂಚಮವೇದ ಎನ್ನುವುದು ಇಂತಹ ಕಾರಣಕ್ಕಾಗಿಯೇ. ಕುಂತಿ ತನ್ನ ಸೊಸೆಗೆ ಮಾಡುವ ಆಶೀರ್ವಾದ. ಮದುವೆಯ ಆಶೀರ್ವಾದ ಮಂತ್ರಗಳ ಅರ್ಥವನ್ನು ಸರಳ ಸಂಸ್ಕೃತದಲ್ಲಿ ಹೇಳಿಸಿದ್ದಾರೆ ವ್ಯಾಸರು- ಮಗಳೇ, ಇಂದ್ರನು ಇಂದ್ರಾಣಿಯೊಡನೆ , ಅಗ್ನಿಯು ಸ್ವಾಹಾಳೊಡನೆ, ಚಂದ್ರನು ರೋಹಿಣಿಯೊಡನೆ, ನಳನೊಡನೆ ದಮಯಂತಿಯೂ, ಕುಬೇರನೊಡನೆ ಭದ್ರೆಯೂ, ವಸಿಷ್ಠನೊಡನೆ ಅರುಂಧತಿಯೂ, ನಾರಾಯಣನೊಡನೆ ಲಕ್ಷ್ಮಿಯು ಯಾವ ಆದರ್ಶದಾಂಪತ್ಯ ನಡೆಸಿದರೋ ಹಾಗೆಯೇ ನೀನು ಪತಿಗಳೊಡನೆ ಬಾಳು. ಇಲ್ಲಿ ಋಗ್ವೇದದ ಸೂರ್ಯವರ್ಗದ ಈ ಮಂತ್ರ ನೋಡಿ- *ಇಂದ್ರಸ್ಯ ತು ಯಥೇಂದ್ರಾಣೀ ಶ್ರೀಧರಸ್ಯ ಯಥಾ ಶ್ರಿಯಾ,ಶಂಕರಸ್ಯ ಯಥಾ ಗೌರೀ ತದ್ಭರ್ತುರಪಿ ಭರ್ತರಿ, ಅತ್ರೇರ್ಯಥಾನುಸೂಯಾ ಸ್ಯಾದ್ ವಸಿಷ್ಠಸ್ಯಾಪ್ಯರುಂಧತೀ, ಕೌಶಿಕಸ್ಯ ಯಥಾ ಸತೀ ತಥಾ ತ್ವಮಪಿ ಭರ್ತರಿ* _ಇದರ ಸಾರವೇ ಕುಂತಿ ಆಡಿದ್ದು. ಎಂತಹ ಸುಂದರ ಹಾರೈಕೆ. ಈಗ ನಾವು ಹಾರೈಸುವ ಅತ್ತೆ ಮಾವರನ್ನು ಚೆನ್ನಾಗಿ ನೋಡಿಕೊಳ್ಳುವ, ಕುಲವನ್ನು ಉದ್ಧರಿಸುವ, ನಿಷ್ಠರಾಗಿರುವ ಯಾವ ದೊಡ್ಡ ಮಾತುಗಳಿಲ್ಲದೇ ಸರಳವಾಗಿ ಸುಂದರವಾಗಿ ನುಡಿದ ಹಾರೈಕೆ._

*ಜೀವಸೂರ್ವೀರಸೂರ್ಭದ್ರೇ ಬಹುಸೌಖ್ಯಸಮನ್ವಿತಾ ಸುಭಗಾ ಭೋಗಸಂಪನ್ನಾ ಯಜ್ಞಪತ್ನೀ ಸ್ವನುವ್ರತಾ ಅತಿಥೀನಾಗತಾನ್ಸಾಧೂನ್ಬಾಲಾನ್ವೃದ್ಧಾನ್ಗುರೂಂಸ್ತಥಾ ಪೂಜಯಂತ್ಯಾ ಯಥಾನ್ಯಾಯಂ ಶಶ್ವದ್ಗಚ್ಛಂತು ತೇ ಸಮಾಃ*

_ಮಂಗಳೇ, ದೀರ್ಘಾಯುಷ್ಮಂತರೂ, ಶೂರರೂ ಆದ ಪುತ್ರರ ಪಡೆ, ವಿಪುಲ ಸೌಖ್ಯ ಹೊಂದು, ಸೌಭಾಗ್ಯವುಳ್ಳವಳಾಗಿ ಭೋಗಸಮೃದ್ಧಿ ಹೊಂದು, ಸದಾಚಾರಶೀಲಳಾಗಿ ಯಜ್ಞೋಪಯೋಗಿಯಾಗಿ ಬಾಳು. ಎಂತಹ ಉತ್ತಮ ಮಾತುಗಳು. ದ್ರೌಪದಿ ಇದಾವುದನ್ನು ಪಡೆಯದೆ ದುಃಖವನ್ನೇ ಹೆಚ್ಚು ಪಡೆದದ್ದು ಕರ್ಮಫಲ. ಆದರೆ ಆಶೀರ್ವಾದದ ಘನತೆ ಹೇಗಿರಬೇಕು, ಮನದುಂಬಿ ಹಾರೈಸುವ ಬಗೆ ಹೇಗೆ ಇತ್ಯಾದಿ ಮಾತುಗಳು ಎಲ್ಲಾ ಹಿರಿಯರಿಗೆ ಆದರ್ಶಪ್ರಾಯ. ಗಂಡನನ್ನು ವಶಪಡಿಸಿಕೊಳ್ಳುವುದು, ತನ್ನ ಅಭಿಮತದಂತೆ ಉಳಿದವರನ್ನು ನಡೆಸುವುದು ಇತ್ಯಾದಿ ಉಪದೇಶಿಸುವ ಆಧುನಿಕ ಹೆಣ್ಣು ಹೆತ್ತವರು ( ಕೆಲವರು) ಇದನ್ನು ಗಮನಿಸಿದರೆ ಶ್ರೇಯಸ್ಸಾಗುವುದೇನೋ ಏನೋ!_

*ತತ್ಸರ್ವಂ ಪ್ರತಿಜಗ್ರಾಹ ಧರ್ಮರಾಜೋ ಯುಧಿಷ್ಠಿರಃ ಮುದಾ ಪರಮಯಾ ಯುಕ್ತೋ ಗೋವಿಂದಪ್ರಿಯಕಾಮ್ಯಯಾ*

*ಕಿಮಲಭ್ಯಂ ಭಗವತಿ ಪ್ರಸನ್ನೇ* _ಎಂಬಂತೆ ಪಾಂಡವರಿಗೆ ಕೃಷ್ಣನು ಕೊಡುವ ಉಡುಗೊರೆಗಳು ಅಪಾರ. ಮುತ್ತು ವೈಢೂರ್ಯ ಖಚಿತ ಆಭರಣಗಳು, ನಾನಾದೇಶಗಳ ಬೆಲೆಬಾಳುವ ವಸ್ತ್ರಗಳು, ಉತ್ತಮ ಕಂಬಳಿಗಳು, ಚರ್ಮಗಳು, ನಾನಾಬಗೆಯ ಶಯನಗಳು, ಆಸನ-ವಾಹನಗಳು, ವೈಡೂರ್ಯವಜ್ರಗಳಿಂದ ಅಲಂಕೃತವಾದ ಪಾತ್ರೆಗಳು, ರೂಪ-ಯೌವನ-ದಾಕ್ಷಿಣ್ಯದಿಂದ ಕೂಡಿದ ಸಾವಿರಾರು ಮಂದಿ ದಾಸಿಯರು , ಭದ್ರಜಾತಿಯ ಉತ್ತಮ ಆನೆಗಳು, ಅಲಂಕೃತವಾದ ಕುದುರೆಗಳು, ದಂತದ ಕೆತ್ತನೆ ಹಾಗೂ ಚಿನ್ನದ ಪಟ್ಟಿಗಳಿಂದ ಅಲಂಕೃತವಾದ ರಥಗಳನ್ನು, ಕೋಟಿಗಟ್ಟಲೆ ಚಿನ್ನದ ನಾಣ್ಯಗಳನ್ನು, ಸಹಜವಾದ ಕೃತಕವಲ್ಲದ ಚಿನ್ನದ ಗಟ್ಟಿಗಳನ್ನೂ ಕಳುಹಿಸಿಕೊಟ್ಟನು. ಧರ್ಮಜನು ಕೃಷ್ಣನಿಗೆ ಪ್ರಿಯವಾಗಲೆಂದು ಅವೆಲ್ಲವನ್ನೂ ಸಂತೋಷದಿಂದ ಸ್ವೀಕರಿಸಿದನು. ಭಕ್ತರಿಗೆ ಹರಸಿದರೆ ಭಗವಂತ ಕೇಳಿದ್ದು ಕೇಳದಿರುವುದು ಎಲ್ಲವನ್ನೂ ಅನುಗ್ರಹಿಸುತ್ತಾನೆ.ಅದನ್ನೇ ಹೇಳಿದ್ದು ಅವನೊಲಿದರೆ ಕೊರಡು ಬಂಗಾರ, ಮುನಿದರೆ ಸಮುದ್ರವೂ ಬರಡಾಗುವುದೆಂದು. ಧರ್ಮಿಷ್ಠರ ಪ್ರಾಮಾಣಿಕರ ಮೇಲೆ ಭಗವಂತನ ದಯೆಗೆ ಈ ಸನ್ನಿವೇಶ ಸಾಕ್ಷೀಭೂತವಾಗಿದೆ.ನಾವೂ ಧರ್ಮಜನ ಪಥದಲ್ಲಿ ನಡೆಯೋಣ._

ಮುಂದುವರಿಯುವುದು

http://shreenidhiabhyankar.blogspot.in/

🍂📕 ಸಂಗ್ರಹ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩