ರಾಮಾಯಣ ೧೭೦

📖🏝ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೧೭೦🏝📖 

*ಯಥೋಕ್ತಂ ತತ್ಸುವಿಹಿತಂ ನ ಕಿಂಚಿತ್ಪರಿಹೀಯತೇ | ಯಥೋಕ್ತಂ ತತ್ಕರಿಷ್ಯಾಮೋ ನ ಕಿಂಚಿತ್ಪರಿಹಾಸ್ಯತೇ ||*

_ವಸಿಷ್ಠರು ಎಲ್ಲಾ ಮಂತ್ರಿವರ್ಗದವರಿಗೆ ಹಾಗೂ ಪ್ರಮುಖರಿಗೆ ಆದೇಶ ನೀಡಿದಾಗ ಅವರ ಮಾತನ್ನು ಅಂಗೀಕರಿಸಿದ ಪರಿ. ಯಜ್ಞಕ್ಕೆ ಸಂಬಂಧಿಸಿದ ಕಾರ್ಯದಲ್ಲಿ ನಿಯುಕ್ತರಾದವರನ್ನು ಕಾಲಕಾಲಕ್ಕೆ ಸರಿಯಾಗಿ ಉಪಚರಿಸಬೇಕು. ಅನಾಹೂತರಾಗಿ ಅಂದರೆ ಕರೆಯದೇ ಬಂದವರನ್ನೂ ದಕ್ಷಿಣೆ ಹಾಗೂ ಮೃಷ್ಟಾನ್ನಭೋಜನಗಳಿಂದ ತೃಪ್ತಿಪಡಿಸಬೇಕು. ಎಲ್ಲಾ ಕಾರ್ಯಗಳನ್ನೂ ಸುವಿಹಿತವಾಗಿ ಅಂದರೆ ಕ್ರಮಪ್ರಕಾರವಾಗಿ ಯಾವುದೂ ಲೋಪವಾಗದಂತೆ ಮುಖ್ಯವಾಗಿ ಯಾರೊಬ್ಬರಿಗೂ ಅಸಮಾಧಾನ ಆಗದ ರೀತಿಯಲ್ಲಿ ನಿರ್ವಹಿಸಬೇಕೆಂದು ವಸಿಷ್ಠರು ನುಡಿದಾಗ ಉಳಿದವರಾಡುವ ಮಾತು- ಯಾವ ಲೋಪ ಉಂಟಾಗದಂತೆ ನೋಡಿಕೊಳ್ಳುವೆವು. ಯಾರೊಡನೆಯೂ ಪರಿಹಾಸವನ್ನಾಗಲೀ, ವಿನೋದವನ್ನಾಗಲೀ, ಯಾವ ವಿಷಯದಲ್ಲಿ ಆದರೂ ಉದಾಸೀನಮನೋಭಾವವನ್ನಾಗಲೀ ತಾಳದೆ ಶ್ರದ್ಧೆಯಿಂದ ಮಾಡುತ್ತೇವೆ. ಒಂದು ದೊಡ್ಡ ಸಮ್ಮೇಳನ, ಕಾರ್ಯಕ್ರಮ ನಡೆಯುವಾಗ ಯಾರೋ ಒಂದಷ್ಟು ತಿಂದರು, ಇನ್ನಾರೋ ಉಪವಾಸ ಬಿದ್ದರು ಎಂದಾಗುವುದು ಸಹಜ. ನಮ್ಮ ಸಾಂಸ್ಕೃತಿಕ ಅಥವಾ ಸಾಹಿತ್ಯಿಕ ಅಥವಾ ರಾಜಕೀಯ ಕಾರ್ಯಕ್ರಮಗಳಿಗೆ ಒಂದು ನಿಶ್ಚಿತ ಉದ್ದೇಶ, ಶ್ರದ್ಧೆ, ಲೋಕಕಲ್ಯಾಣ ಯಾವುದೂ ಇರುವುದಿಲ್ಲ. ಕೀರ್ತಿ, ಪ್ರತಿಷ್ಠೆ ಆಯೋಜಕರಿಗೆ ಮುಖ್ಯವಾದರೆ ಹಿಂಬಾಲಕರಿಗೆ ಅಥವಾ ಸಹಕಾರಿಗಳಿಗೆ ಸಿಕ್ಕಿದಷ್ಟು ದೋಚುವ ಹಂಬಲ. ಆದರೆ ದಶರಥನ ಯಜ್ಞ ಅಂತಹ ಕಾರ್ಯಕ್ರಮವಲ್ಲ. ಲೋಕಕಲ್ಯಾಣದ ಜೊತೆಗೆ ತನಗೂ ಶ್ರೇಯಸ್ಸು ದೊರಕುವುದೆಂಬ ಹಂಬಲ. ಅಲ್ಲಿ ತಪ್ಪಿಯೂ ಯಜ್ಞದ ನಿಂದೆ, ಅಪಹಾಸ್ಯ ಮಾಡುವವರು ಒಬ್ಬರೂ ಇರಲಿಲ್ಲ. ಏಕೆಂದರೆ ಅದು  ಕೇವಲರಾಜನ ಕ್ಷೇಮ ಬಯಸಿ ಮಾಡುವ ಉದ್ದೇಶ ಹೊಂದಿರಲಿಲ್ಲ. ಕಾಲಕಾಲಕ್ಕೆ ಮಳೆ ಬೆಳೆ, ರೋಗರುಜಿನಗಳಿಂದ ರಕ್ಷಣೆ ಇವುಗಳೆಲ್ಲವೂ ಇಂತಹ ಸತ್ಕಾರ್ಯಗಳಿಂದ ಸಾಧಿತವಾಗುತ್ತಿದ್ದವು. ಹಾಗಾಗಿಯೇ ವಸಿಷ್ಠರ ಮಾತು- ಬಂದವರ ಮನ ನೋಯುವ ಯಾವ ಮಾತೂ ಅಥವಾ ಅತಿಥಿಗಳಿಗೆ ಯಾಕಾದರೂ ಬಂದೆವೋ ಅನ್ನಿಸುವ ವರ್ತನೆ ಅಥವಾ ಏನೋ ಗುಂಪಲ್ಲಿ ಗೋವಿಂದ ಎನ್ನುವ ತಾತ್ಸಾರ ಮನೋಭಾವ ಎಂದಿಗೂ ಬರಕೂಡದು. ಮಾಡುವ ಕರ್ಮದಲ್ಲಿ ಪೂರ್ಣಶ್ರದ್ಧೆ ಹಾಗೂ ಇದೆಲ್ಲವೂ ನಮ್ಮ ಒಳಿತಿಗೆ ಎಂಬ ಭಾವನೆ ಇರಬೇಕು ಎಂದು._

*ಬ್ರಾಹ್ಮಣಾನ್ ಕ್ಷತ್ರಿಯಾನ್ವೈಶ್ಯಾನ್ ಶೂದ್ರಾಂಶ್ಚೈವ ಸಹಸ್ರಶಃ | ಸಮಾನಯಸ್ವ ಸತ್ಕೃತ್ಯ ಸರ್ವದೇಶೇಷು ಮಾನವಾನ್ ||*

_ಬಹುಶಃ ಪ್ರ-ಗತಿಪರರು ಯಾರೂ ರಾಮಾಯಣದ ಈ ವಾಕ್ಯ ಓದಿದಂತಿಲ್ಲ. ಆ ಕಾಲಕ್ಕಿದ್ದ ನಾಲ್ಕು ವರ್ಣದವರನ್ನೂ ಸಾವಿರಾರು ಸಂಖ್ಯೆಯಲ್ಲಿ ಯಜ್ಞಕ್ಕೆ ಆಹ್ವಾನಿಸುತ್ತಿದ್ದಾರೆ. ಅದೂ ಸುಮ್ಮನೆ ಪತ್ರಿಕೆ ಕಳುಹಿಸಿ ಬಿಡುವುದಲ್ಲ. ನಾನಾ ದೇಶದ ಎಲ್ಲಾ ವರ್ಣದ ಪ್ರಮುಖರನ್ನು ಸತ್ಕರಿಸಿ ಈ ಯಜ್ಞಕ್ಕೆ ಆಹ್ವಾನಿಸಲಾಗುತ್ತಿದೆ. ಸಮಾಜ ನಡೆಯುತ್ತಿದ್ದದ್ದೇ ಈ ನಾಲ್ಕು ಅಂಗಗಳಿಂದ. ದೇಹದಲ್ಲಿ ಎರಡು ಕೈಗಳು-ಎರಡು ಕಾಲುಗಳಲ್ಲಿ ಯಾವುದು ಮುಖ್ಯ ಎಂದು ಕೇಳಿದರೆ ಎಲ್ಲವೂ ಎಂದಂತೆ ಸಮಾಜದ ಸುವ್ಯವಸ್ಥೆಗೆ ಈ ನಾಲ್ಕು ವರ್ಣದವರೂ ಕಾರಣ. ಕೇವಲ ಬ್ರಾಹ್ಮಣ ಅಥವಾ ಕೇವಲ ಶೂದ್ರರಿಂದ ಸಮಾಜ ಮುನ್ನಡೆಯುವುದು ಅಸಾಧ್ಯ. ಹಾಗಾಗಿಯೇ ದಶರಥನ ಆಮಂತ್ರಣ ಎಲ್ಲರಿಗೂ ಸಮಾನ. ಹಿಂದೆ ತಾರತಮ್ಯವಿತ್ತು, ಬ್ರಾಹ್ಮಣ-ಕ್ಷತ್ರಿಯರಿಗೆ ಮಾತ್ರ ಸಮಾಜದಲ್ಲಿ ಸ್ಥಾನವಿತ್ತು, ಉಳಿದವರು ಪ್ರಾಣಿಗಳಂತೆ ನಡೆಸಲ್ಪಡುತ್ತಿದ್ದರು ಎನ್ನುವವರಿಗೆ ದಶರಥನ ಆಳ್ವಿಕೆಯ ಗಂಧವೂ ಗೊತ್ತಿಲ್ಲ._
  

ಸಂಗ್ರಹ📖🖋ಶ್ರೀನಿಧಿ ಅಭ್ಯಂಕರ್.

ಎಲ್ಲಾ ಲೇಖನಗಳಿಗೆ ಒಮ್ಮೆ ಇಣುಕಿ http://shreenidhiabhyankar.blogspot.com/?m=1

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩