ರಾಮಾಯಣ ೧೬೬

📖🏝ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು ಭಾಗ-೧೬೬🏝📖        

*ತತಃ ಕಾಲೇ ಬಹುತಿಥೇ ಕಸ್ಮಿಂಶ್ಚಿತ್ಸುಮನೋಹರೇ | ವಸಂತೇ ಸಮನುಪ್ರಾಪ್ತೇ ರಾಜ್ಞೋ ಯಷ್ಟುಂ ಮನೋಭವತ್*

_ದಶರಥನ ಕೋರಿಕೆ ಮನ್ನಿಸಿ ಋಷ್ಯಶೃಂಗನು ಶಾಂತೆಯೊಡನೆ ಅಯೋಧ್ಯೆಗೆ ಬಂದು ಬಹಳ ಕಾಲವಾಗಿದೆ. ಅನಂತರ ಒಂದು ದಿನ ವಸಂತ ಋತು ಪ್ರಾರಂಭವಾಗುತ್ತಿರುವುದನ್ನು ಕಂಡು ರಾಜನು ಯಜ್ಞ ಮಾಡಲು ನಿಶ್ಚಯಿಸಿದನು. ಪುರೋಹಿತರು ಸಿಕ್ಕಿದರು ಅಥವಾ ನಮಗೆ ಅನುಕೂಲ ಇದೆಯೆಂದು ಕೂಡಲೇ ಯಜ್ಞ ಕರ್ಮಗಳನ್ನು ಮಾಡುವುದಲ್ಲ. ತಾರಾಬಲ ಅನುಕೂಲವಾಗಿದೆಯಾ, ಭೂಮಿಯಲ್ಲಿ ಅಗ್ನಿಯ ವಾಸ ಹಾಗೂ ಆಹುತಿ ಇದೆಯಾ, ಕೆಟ್ಟ ಯೋಗ-ಕರಣಗಳು ಇಲ್ಲದ ದಿನ ಇವುಗಳನ್ನೆಲ್ಲ ವಿಮರ್ಶಿಸಿ ಕರ್ಮದಲ್ಲಿ ತೊಡಗಬೇಕು. ಹಾಗಿಲ್ಲದೆ ವಿರಾಮದ ದಿನ, ಪುರೋಹಿತರು ಸಿಕ್ಕಿದ ದಿನ ಅಥವಾ ಮಳೆ ಇಲ್ಲದ ದಿನ ಎಂದೆಲ್ಲಾ ಯಜ್ಞದಲ್ಲಿ ತೊಡಗಿದರೆ ಅದು ಕೊಡುವ ಫಲವೂ ಅಷ್ಟೇ ಆಗಿರುತ್ತದೆ._*ಚೈತ್ರಾಂ ಪೌರ್ಣಮಾಸ್ಯಾಂ ಪ್ರಾತಃ ಅಶ್ವಮೇಧೇನ ಯಕ್ಷ್ಯೇ* _ಎಂದು ಶ್ರೌತ ಪ್ರಯೋಗವಿದೆ. ಹಾಗಾಗಿ ಅಶ್ವಮೇಧ ಮಾಡ ಹೊರಟ ದಶರಥನು ಅನುಕೂಲವಾದ ವಸಂತಕಾಲ ಬರಲು ಕಾದನು. ತನಗೆ ಸಂತಾನ ಬೇಗ ದೊರಕಬೇಕೆಂಬ ಬಯಕೆ ಇದ್ದರೂ ಕಾಲ ಅನುಕೂಲ ಆಗದೇ ಮುಂದಡಿ ಇಡುವ ಅವಿಮರ್ಶ ಬುದ್ಧಿ ಅವನದಾಗಿರಲಿಲ್ಲ._

*ತತಃ ಪ್ರಸಾದ್ಯ ಶಿರಸಾ ತಂ ವಿಪ್ರಂ ದೇವವರ್ಣಿನಮ್*

_ಅನಂತರ ತನಗಿಂತ ವರ್ಷದಲ್ಲಿ ಅಥವಾ ಅಧಿಕಾರದಲ್ಲಿ ಬಹಳ ಕಿರಿಯನಾದರೂ ಜ್ಞಾನ-ಕರ್ಮಗಳಲ್ಲಿ ಲೋಕದ ಎತ್ತರ ಮೀರಿ ನಾಕದೆತ್ತರಕ್ಕೆ ಬೆಳೆದಿದ್ದ ಋಷ್ಯಶೃಂಗನನ್ನು ರಾಜನು ತಲೆಬಾಗಿ ನಮಸ್ಕರಿಸಿ ಯಜ್ಞದಲ್ಲಿ ಬ್ರಹ್ಮತ್ವವನ್ನು ಸ್ವೀಕರಿಸಲು ಕೇಳಿಕೊಂಡನು. ಶ್ರೇಷ್ಠರನ್ನು ನಿಮಂತ್ರಿಸುವಾಗ ತಲೆಬಾಗುವುದು ಉತ್ತಮ ಸಂಸ್ಕಾರ. ಬಾಗಿದವನು ಬೆಳೆಯುವನೇ ಹೊರತು ಬೀಗುವವನಲ್ಲ. ತನ್ನ ಮಗಳ ಸಮಾನಳ ಪತಿಗೆ ಇದೇ ಕಾರಣದಿಂದ ದಶರಥನು ತಲೆ ಬಾಗಿದ್ದು. ಒಂದು ದೇಶದ ಕ್ಷಾಮವನ್ನೇ ದೂರಗೊಳಿಸಿದ ತಪಶ್ಶಕ್ತಿಯ ಮುಂದೆ ಅಧಿಕಾರ-ಪದವಿ-ವಯಸ್ಸು ಮುಂತಾದವು ಗೌಣ. ದೊಡ್ಡ ಯಜ್ಞಗಳಲ್ಲಿ ಆಚಾರ್ಯ ಅಥವಾ ಅಧ್ವರ್ಯುವಿಗಿಂತ ಬ್ರಹ್ಮತ್ವಕ್ಕೆ ಹೆಚ್ಚು ಗೌರವ. ಯಜ್ಞದ ಯಾವ ಅಂಗವೂ ಊನವಾಗದಂತೆ ಸಮರ್ಥವಾಗಿ ಮಾರ್ಗದರ್ಶನ ಮಾಡುವ ಮಹತ್ತರ ಜವಾಬ್ದಾರಿ ಅವನದಾಗಿರುತ್ತದೆ. ಬ್ರಹ್ಮನ ಸ್ಥಾನ ನಾಮಮಾತ್ರ ರಾಜ್ಯಪಾಲರ ಸ್ಥಾನದಂತಿರದೇ ಮುಖ್ಯ ನ್ಯಾಯಾಧೀಶರ ಸ್ಥಾನದಂತಿರುತ್ತದೆ. ಈಗ  ಬ್ರಹ್ಮನನ್ನು ನಾಮಮಾತ್ರಕ್ಕೆ ಹಿರಿಯರನ್ನು ಅಥವಾ ಯಾರಾದರೊಬ್ಬರನ್ನು ಕೂಡಿಸಿ ದೊಡ್ಡ ಯಾಗಾದಿಗಳನ್ನು ಮಾಡುವ ಪದ್ಧತಿ ಎಳ್ಳಷ್ಟೂ ಸರಿಯಾದದ್ದಲ್ಲ. ಅರ್ಹತೆ ಪಡೆದಿರುವ ವ್ಯಕ್ತಿಗಳನ್ನು ಮಾತ್ರ ಆ ಹುದ್ದೆಗೆ ನಿಯೋಜಿಸಿ ಗೌರವಿಸಬೇಕು. ಆಗ ನಮ್ಮ ಕರ್ಮವೂ ಸಾರ್ಥಕವೂ-ಸರಿಯಾಗಿಯೂ ನಡೆಯುತ್ತದೆ. ದಶರಥನ ಆಯ್ಕೆ ಎಷ್ಟು ಯೋಗ್ಯವಾಗಿತ್ತೆಂದರೆ ವಸಿಷ್ಠಾದಿ ಮುನಿಗಳೇ ಮನಸಾರೆ ಒಪ್ಪಿದರಂತೆ._


ಮುಂದುವರಿಯುತ್ತದೆ.....

ಸಂಗ್ರಹ📖🖋ಶ್ರೀನಿಧಿ ಅಭ್ಯಂಕರ್.

ಎಲ್ಲಾ ಲೇಖನಗಳಿಗೆ ಒಮ್ಮೆ ಇಣುಕಿ http://shreenidhiabhyankar.blogspot.com/?m=1

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩