ಮಹಾಭಾರತ ವಿಮರ್ಶೆ
ಸತ್ಯದ ಹುತ್ತ ಭಾಗ-೨
ಅರ್ವಾಚೀನ ಕವಿಗಳ ಉದ್ದೇಶವಾದರೂ ಏನು?
ಪ್ರಸಂಗ-೨
ದುರ್ಯೋಧನನ ಅಪಮಾನ
ರಾಜಸೂಯ ಯಜ್ಞ ಮುಗಿದು ಎಲ್ಲಾ ರಾಜರು ಕೃಷ್ಣಾದಿಗಳೂ ಕೂಡ ತಮ್ಮ ತಮ್ಮ ಊರಿಗೆ ಹಿಂತಿರುಗಿದ್ದರೂ ದುರ್ಯೋಧನ ಹಾಗೂ ಶಕುನಿ ಮಾತ್ರ ಅಲ್ಲಿಯೇ ನೆಲೆಸಿರುತ್ತಾರೆ.
ಆ ಸಂದರ್ಭದಲ್ಲೊಮ್ಮೆ ದುರ್ಯೋಧನ ಅಲ್ಲಿಯ ನೆಲಜಲದ ವ್ಯತ್ಯಾಸ ತಿಳಿಯದೇ ಜಾರಿ ಬೀಳುತ್ತಾನೆ ಹಾಗೂ ತಲೆ ಹೊಡೆದುಕೊಳ್ಳುತ್ತಾನೆ. ಈ ಸಮಯದಲ್ಲಿ ಅಲ್ಲಿ ಹಾಜರಿದ್ದ ಭೀಮಾದಿಗಳು ಹಾಸ್ಯ ಮಾಡುತ್ತಾರೆ. ಈ ಅಪಮಾನದ ಪ್ರಸಂಗದಲ್ಲಿ ದ್ರೌಪದಿಯ ಪಾತ್ರ ಏನೂ ಇಲ್ಲ ವ್ಯಾಸರ ಕೃತಿಯ ಪ್ರಕಾರ. ಆದರೆ ಮುಂದಿನ ಮಹಾಭಾರತ ಆಧರಿಸಿದ ಕೃತಿಗಳು ಇಲ್ಲಿ ದ್ರೌಪದಿಯನ್ನೂ ಎಳೆತಂದು ಅವಳ ಕೈಯಲ್ಲೂ ಜೋರಾಗಿ ನಕ್ಕಿಸಿ ಅಪಮಾನ ಮಾಡಿಸುತ್ತಾರೆ.
ಇಲ್ಲಿ ದ್ರೌಪದಿಯು ಅಪಮಾನ ಮಾಡಿದ್ದಕ್ಕೆ ಪ್ರತಿಯಾಗಿ ಮುಂದೆ ದುರ್ಯೋಧನ ವಸ್ತ್ರ ಎಳೆಸಿ ಅಪಮಾನ ಮಾಡಿದನೆಂದು ದುರ್ಯೋಧನನ ಸಮರ್ಥನೆಗೆ ಇದನ್ನು ಬಳಸಿದ್ದಾರೆ. ವ್ಯಾಸ ಭಾರತದ ಪ್ರಕಾರ ದ್ರೌಪದಿಯ ಪಾತ್ರವೇ ಇಲ್ಲದ ಪ್ರಕರಣವದು. ಆದರೆ ದುರ್ಯೋಧನನು ತನ್ನ ತಂದೆಯ ಬಳಿ ಈ ಪ್ರಸಂಗ ವಿವರಿಸುವಾಗ ಕೃಷ್ಣನನ್ನೂ ದ್ರೌಪದಿಯನ್ನು ಸೇರಿಸಿದ್ದಾನೆ.
ಇದು ಅವನ ದೌಷ್ಟ್ಯತೆಗೆ ಸಾಕ್ಷಿಯೇ ಹೊರತು ನಿಜಕ್ಕಾದ ಘಟನೆ ಅಲ್ಲ. ನಡೆದ ಘಟನೆಗೆ ಒಂದಷ್ಟು ಸೇರಿಸಿ ವೈಭವೀಕರಿಸುವುದು, ತನ್ಮೂಲಕ ತನ್ನ ಉದ್ದೇಶ ಸಾಧಿಸುವುದು ಹೊರತು ನಿಜವಿಷಯ ಅದಲ್ಲ.
ಎಲ್ಲಾ ರಾಜರು ಹಿಂತಿರುಗಿದ ಮೇಲೆ ಅಲ್ಲಿ ಉಳಿಯುವ ಅವಶ್ಯಕತೆ ಈ ಇಬ್ಬರು ದುಷ್ಟರಿಗೇನಿತ್ತು? ಒಂದು ವೇಳೆ ಅಲ್ಲಿಯ ವೈಭವ ಕಣ್ತುಂಬಿಕೊಳ್ಳುವುದೇ ಉದ್ದೇಶವಾದರೆ ಸುಮಾರು ಒಂದು ತಿಂಗಳ ಕಾಲ ಅಲ್ಲಿಯೇ ಇದ್ದರು. ಹೋಗಲಿ ಪಾಂಡವರೊಡನೆ ಆತ್ಮೀಯತೆ ಎಂದರೆ ಯಾವ ನಿಟ್ಟಿನಲ್ಲೂ ಇಲ್ಲ. ಆತ್ಮಸಖನಾದ ಕೃಷ್ಣನೇ ಹಿಂತಿರುಗಿದ ಮೇಲೆ ಈ ದ್ವೇಷಸಖರಿಗೇನು ಕೆಲಸ ಇಂದ್ರಪ್ರಸ್ಥದಲ್ಲಿ?
ಅರ್ವಾಚೀನ ಕವಿಗಳ ಉದ್ದೇಶ ಬಹುಶಃ ದುರ್ಯೋಧನನ ವೈಭವೀಕರಣ ಅಥವಾ ಅವನ ಸಮರ್ಥನೆ. ದುಷ್ಟರನ್ನು ಸಮರ್ಥಿಸುವುದು ದುಷ್ಟತನವೇ ಸರಿ. ವ್ಯಾಸರಾಗಲಿ ವಾಲ್ಮೀಕಿಗಳಾಗಲಿ ಎಂದೂ ದೌಷ್ಟ್ಯವನ್ನು ಸಮರ್ಥಿಸಲಿಲ್ಲ ಎಂಬುದು ಎಂದಿಗೂ ನೆನಪಿಡಬೇಕಾದ ಅಂಶ.
ಆಧಾರ- ಮಹಾಭಾರತ ಕ್ರಿಟಿಕಲ್ ಎಡಿಶನ್. ರಾ. ಗಣೇಶರ ಮಾತು.
ಮುಂದುವರೆಯುವುದು......
ಶ್ರೀನಿಧಿ ಅಭ್ಯಂಕರ್.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ