ಮಹಾಭಾರತ

📗☘ ಮಹಾಭಾರತದ ಕೆಲವು ವಿಶೇಷ ಮಾಹಿತಗಳು ☘📗

*ಯವೀಯನ್ದೇವಲಸ್ಯೈಷ ವನೇ ಭ್ರಾತಾ ತಪಸ್ಯತಿ*

_ಗಂಧರ್ವನು ಅರ್ಜುನನ  ಬಳಿ ಹೇಳುವ ಮಾತು. ದೇವಲನ ತಮ್ಮನಾದ ಧೌಮ್ಯರು ಉತ್ಕೋಚಕವೆಂಬ ತೀರ್ಥದ ಬಳಿ ತಪಸ್ಸು ಮಾಡುತ್ತಿರುವನು. ಅವನನ್ನು ಪುರೋಹಿತನನ್ನಾಗಿ ವರಿಸಿ._

*ನೀಲೋತ್ಪಲಸಮೋ ಗಂಧೋ ಯಸ್ಯಾಃ ಕ್ರೋಶಾತ್ಪ್ರವಾಯತಿ*

_ಬ್ರಾಹ್ಮಣರು ದ್ರೌಪದಿಯ ವರ್ಣನೆಯ ಸಂದರ್ಭದಲ್ಲಿ ಹೇಳುವ ಮಾತು. ಆ ದ್ರೌಪದಿಯ ದೇಹದಿಂದ ನೀಲೋತ್ಪಲಕ್ಕೆ ಸಮನಾದ ಪರಿಮಳ ಒಂದು ಕ್ರೋಶದಿಂದಲೇ ಬರುತ್ತದೆ. ಒಂದು ಕ್ರೋಶವೆಂದರೆ ಸುಮಾರು ಎರಡು ಮೈಲು. ನಾವು ನೋಡುವ  ಯಾವ ಹೂವುಗಳಿಗೂ ಅಷ್ಟು ದೂರ ಪಸರಿಸುವ ಪರಿಮಳ ಇಲ್ಲ. ಕೆಲವು ಮರದಲ್ಲಿ ಅರಳುವ ಹೂವುಗಳು ಸುಮಾರು ಎರಡು ಮೂರು ಫರ್ಲಾಂಗ್ ದೂರ ಪರಿಮಳ ಬೀರುತ್ತವೆ. ಹಾಗಾಗಿ ಇದು ಒಂದು ಅದ್ಭುತವೇ ಸರಿ. ಸತ್ಯವತಿಯಂತೆ ದ್ರೌಪದಿಗೂ ಸುಗಂಧತೆ ಇತ್ತೇನೋ!_

*ಪ್ರದಾಸ್ಯಂತಿ ಧನಂ ಗಾಶ್ಚ ಭಕ್ಷ್ಯಂ ಭೋಜ್ಯಂ ಚ ಸರ್ವಶಃ*

_ಸ್ವಯಂವರಕ್ಕೆ ಬಂದ ರಾಜಕುಮಾರರು ತಮ್ಮ ಇಷ್ಟಸಿದ್ಧಿಗಾಗಿ ಹಸುಗಳನ್ನು, ಧನವನ್ನೂ, ಭಕ್ಷ್ಯ, ಭೋಜ್ಯಗಳನ್ನೂ ದಾನವಾಗಿ ನೀಡುವರು ಎಂದು ದಾರಿಹೋಕರಾದ ವಿಪ್ರರು ವರ್ಣಿಸುವರು. ಹಿಂದಿನ ಕಾಲದಲ್ಲಿ ಭಕ್ಷ್ಯ ಭೋಜ್ಯಗಳನ್ನು ದಾನ ಕೊಡುವ ಪದ್ಧತಿ ಇತ್ತೇನೋ! ಈಗ ನಾವು ವ್ರತಗಳಲ್ಲಿ ಮೋದಕ ಮುಂತಾದವನ್ನು ದಾನ ಕೊಡುವಂತೆ ಹಿಂದೆ ಜಿಲೇಬಿ- ಲಡ್ಡು ಹೋಳಿಗೆ ಪಾಯಸ ಎಲ್ಲಾ ದಾನ ನೀಡುತ್ತಿದ್ದರೋ ಏನೊ_

*ತಸ್ಮೈ ಯಥಾವತ್ಸತ್ಕಾರಂ ಕೃತ್ವಾ ತೇನ ಚ ಸಾಂತ್ವಿತಾಃ*

_ಪಾರ್ಥರಿಗೆ ದಾರಿಯಲ್ಲಿ ವ್ಯಾಸರು ಸಿಗುತ್ತಾರೆ. ಅವರನ್ನು ಕಂಡೊಡನೆ ಸತ್ಕರಿಸುವರು. ಪಾಂಡವರ ಧರ್ಮಪ್ರಜ್ಞೆ ಇಲ್ಲಿ ಸುಸ್ಪಷ್ಟವಾಗಿದೆ. ತಪಸ್ವಿಗಳನ್ನು ಎಲ್ಲೇ ಕಾಣಲಿ, ಎಷ್ಟು ಬಾರಿಯಾದರೂ ಕಾಣಲಿ ಒಡನೆಯೇ ಗೌರವಿಸುವ ಬುದ್ಧಿ ನಮಗೆ ಯಾವಾಗ ಬರುವುದೋ! ವ್ಯಾಸರ ಉದಾರತೆಯೂ ಇಲ್ಲಿ ಕಾಣುತ್ತದೆ. ಆ ಪಾಂಡವರ ಕಷ್ಟಕ್ಕೆ ಸಾಂತ್ವನ ಹೇಳಿ ತೆರಳುವ ಅವರ ಕಾರುಣ್ಯ ಜ್ಞಾನಿಗಳಲ್ಲಿ ವಿರಳ. ಇಬ್ಬರ ವರ್ತನೆಯೂ ನಮಗೆ ಆದರ್ಶ._

*ಆನುಪೂರ್ವ್ಯೇಣ ಸಂಪ್ರಾಪ್ತಾಃ ಪಾಂಚಾಲಾನ್ಕುರುನಂದನಾಃ*

_ಪಾಂಡವರು ಒಟ್ಟಿಗೆ ಹೋಗುವುದಿಲ್ಲ. ಕ್ರಮವಾಗಿ ಒಬ್ಬೊಬ್ಬರಾಗಿಯೇ ಪಾಂಚಾಲ ಸೇರುವರು. ಒಟ್ಟಿಗಿದ್ದರೂ ಶತ್ರುಗಳಿಗೆ ತಿಳಿಯದಂತಿರುವ ಅವರ ರಣತಂತ್ರ ಅಥವಾ ರಾಜಕೀಯ ತಂತ್ರ ಇಲ್ಲಿ ತಿಳಿಯುತ್ತದೆ. ಯಾರೂ ತಮ್ಮನ್ನು ಪಾಂಡವರೆಂದು ಅನುಮಾನಿಸದಿರಲೆಂಬ ಎಚ್ಚರದ ಭಾವವೂ ಹೌದು._

📗 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩