ರಾಮಾಯಣ ೯೪
📕🌳 ರಾಮಾಯಣದ ಕೆಲವು ಮೌಲ್ಯಯುತ ಮಾತುಗಳು 🌳📕 ಭಾಗ- ೯೪
*ಶ್ರೂಯತೇ ತುಮುಲೇ ಯುದ್ಧೇ ನ ರೂಪಾಣಿ ಚಕಾಶಿರೇ ಹರೀನೇವ ಸುಸಂಕ್ರುದ್ಧಾ ಹರಯೋ ಜಘ್ನುರಾಹವೇ* *ರಾಕ್ಷಸಾಶ್ಚಾಪಿ ರಕ್ಷಾಂಸಿ ನಿಜಘ್ನುಸ್ತಿಮಿರೇ ತದಾ ಪರಾಂಶ್ಚೈವ ವಿನಿಘ್ನಂತಃ ಸ್ವಾಂಶ್ಚ ವಾನರರಾಕ್ಷಸಾಃ*
_ರಾವಣನ ಆಜ್ಞೆಯಂತೆ ಅನಕಂಪನನ ನೇತೃತ್ವದಲ್ಲಿ ಯುದ್ಧ ಬಿರುಸಾಗಿ ಸಾಗಿತು. ಆ ಸಮಯದಲ್ಲಿ ಯುದ್ಧದ ತೀವ್ರತೆ ಎಷ್ಟಿತ್ತೆಂದರೆ ಅವರ ಗರ್ಜನೆ ಮಾತ್ರ ಕೇಳುತ್ತಿತ್ತೇ ಹೊರತು ಧೂಳಿಯಿಂದಾಗಿ ಯಾರೊಬ್ಬರ ಮುಖವೂ ಕಾಣುತ್ತಿರಲಿಲ್ಲ. ಆ ಗೊಂದಲದಲ್ಲಿ ಕಪಿಗಳೇ ಕೋಪಾವೇಶದಿಂದ ತಮ್ಮವರೆಂದು ತಿಳಿಯದೇ ಕಪಿಗಳನ್ನೇ ಕೊಂದರು. ರಾಕ್ಷಸರು ರಾಕ್ಷಸರನ್ನೇ ಕೊಂದರು. ಹೀಗೆ ಈರ್ವರೂ ಕಣ್ಣು ಕಾಣದೆ ಕೈಗೆ ಸಿಕ್ಕಿದ ಹಾಗೆಲ್ಲ ತಮ್ಮವರನ್ನೂ ಶತ್ರುಗಳನ್ನೂ ಬಡಿದು ಕೊಂದರು. ರಕ್ತದ ಕೋಡಿ ಹರಿಯಿತು. ಕೊನೆಗೆ ರಕ್ತದ ಪ್ರವಾಹದಿಂದ ಧೂಳಿಯು ಸ್ವಲ್ಪ ತಗ್ಗಿತು. ಇದಕ್ಕಾಗಿಯೋ ಏನೋ ಈ ಯುದ್ಧಕ್ಕೆ ಸಾಟಿಯಾದ ಮತ್ತೊಂದು ಯುದ್ಧ ಇಲ್ಲವೆನ್ನುವುದು._
*ಆಪತ್ಸಂಶಯಿತಾ ಶ್ರೇಯೋ ನ ತು ನಿಸ್ಸಂಶಯೀಕೃತಾ ಪ್ರತಿಲೋಮಾನುಲೋಮಂ ವಾ ಯದ್ವಾ ನೋ ಮನ್ಯಸೇ ಹಿತಮ್*
_ಅಕಂಪನನನ್ನು ಹನುಮಂತ ಕೊಂದು ಕಳೆದಾಗ ಚಿಂತೆಗುಂದಿದ ಮುಖವುಳ್ಳ ರಾವಣನು ಮರುದಿನ ತನ್ನೆಲ್ಲಾ ಸೇನೆಯನ್ನು ವೀಕ್ಷಿಸುತ್ತಾ ಪ್ರಹಸ್ತನೊಡನೆ ಹೇಳುವ ಮಾತು. ಪ್ರಹಸ್ತ, ಜಯವೋ-ಅಪಜಯವೋ ಎಂಬ ಸಂಶಯ ಎದುರಾದಾಗ ಆಪತ್ತನ್ನೆದುರಿಸಿ ಹೋರಾಡುವುದೇ ಶ್ರೇಯಸ್ಕರ. ಆ ಸಮಯದಲ್ಲಿ ಸುಮ್ಮನಿದ್ದು ಆಪತ್ತನ್ನು ನಿಶ್ಚಯವಾಗಿ ಬರಮಾಡಿಕೊಳ್ಳುವುದು ಯುಕ್ತವಲ್ಲ. ಪ್ರಹಸ್ತ, ನಿನ್ನ ಅಭಿಪ್ರಾಯ ಇದಕ್ಕನುಗುಣವಿರಲಿ ವಿರುದ್ಧವಿರಲಿ ಈಗ ನಮಗಾವುದು ಹಿತವೆಂಬುದನ್ನು ಹೇಳು ಎನ್ನುತ್ತಾನೆ. ಇದು ಉತ್ತಮ ರಾಜನೀತಿಯ ಮಾತು. ಆಲೋಚಿಸುವ ಸಮಯ ಕಡಿಮೆ ಇದ್ದಾಗ ಕೂಡಲೇ ನಿರ್ಧಾರ ತೆಗೆದುಕೊಳ್ಳುವುದು ಬುದ್ಧಿವಂತಿಕೆ. ಆಗ ನಮ್ಮ ವೈಯಕ್ತಿಕ ನಿರ್ಣಯ ಏನಿದ್ದರೂ ರಾಷ್ಟ್ರದ ಹಿತ ಮುಖ್ಯವಾಗುತ್ತದೆ. ಅದನ್ನೇ ಆಲೋಚಿಸಬೇಕೇ ಹೊರತು ನಮ್ಮ ಆಕಾಂಕ್ಷೆ ಯೋಚನೆಗಳಿಗನುಗುಣವಾಗಿ ಅಲ್ಲ._
http://shreenidhiabhyankar.blogspot.in/
📕 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ