ಮಹಾಭಾರತ ೪೪

🔥📕 ಮಹಾಭಾರತದ ವಿಶೇಷ ಶ್ಲೋಕ ಹಾಗೂ ಮಾಹಿತಿಗಳು📕🔥 ಭಾಗ ೪೪

*ಅಗಸ್ತ್ಯವಟಮಾಸಾದ್ಯ ವಸಿಷ್ಠಸ್ಯ ಚ ಪರ್ವತಮ್ ಭೃಗುತುಂಗೇ ಚ ಕೌಂತೇಯಃ ಕೃತವಾಞ್ಛೌಚಮಾತ್ಮನಃ*

_ಅರ್ಜುನನು ಊಲೂಪಿಯ ಸಂಗದ ನಂತರ ಮುಂದುವರೆದು ಹಲವು ಕ್ಷೇತ್ರಗಳನ್ನು ಸಂದರ್ಶಿಸುತ್ತಾನೆ. ವ್ಯಾಸರು ಸಂದರ್ಭ ನೋಡಿ ಅವುಗಳನ್ನು ಅಲ್ಲಲ್ಲಿ ಉದಾಹರಿಸಿದ್ದಾರೆ. ಹಿಮವತ್ಪರ್ವತದ ತಪ್ಪಲು ದಾಟಿ ಮುಂದೆ ಹೋದಂತೆ *ಅಗಸ್ತ್ಯ ವಟ* ಎಂಬ ಪುಣ್ಯಸ್ಥಳವನ್ನೂ, ವಸಿಷ್ಠಮಹರ್ಷಿಗಳ ಹೆಸರಿನಲ್ಲಿ ಪ್ರಖ್ಯಾತವಾದ ಅವರು ತಪಗೈದ ಪರ್ವತವನ್ನೂ, ಭೃಗುತುಂಗವೆಂಬ ತೀರ್ಥವನ್ನೂ ಸೇವಿಸಿದನು. ಅನಂತರ *ಹಿರಣ್ಯಬಿಂದು* ಮಹರ್ಷಿಗಳು ಸಾಧನೆಗೈದ ತೀರ್ಥಕ್ಷೇತ್ರವನ್ನು ಸಂದರ್ಶಿಸಿ ಪೂರ್ವದ ಕಡೆಗೆ ಹೊರಟನು. ಹಿಮಾಲಯ ದಕ್ಷಿಣ ದಿಕ್ಕಿಗೆ ಇರುವುದು. ಅಲ್ಲಿಂದ ಪೂರ್ವದ  ಭಾಗಕ್ಕೆ ಹೊರಟನು. ಹಾಗೆ ಹೊರಟವನು ದೇವತೆಗಳು ತಪಸ್ಸು ಮಾಡಿ ಸಿದ್ಧಿ ಪಡೆದ *ನೈಮಿಷಾರಣ್ಯವನ್ನೂ*  , ರಮಣೀಯವಾದ *ಉತ್ಪಲಿನೀ* ನದಿಯನ್ನೂ, ( ಈಗ ಯಾವ ಹೆಸರಿನಲ್ಲಿದೆಯೋ ತಿಳಿದಿಲ್ಲ) ನಂದಾ-ಅಪರನಂದಾ-ಕೌಶಿಕೀ-ಮಹಾನದೀ-ಗಯಾ-ಗಂಗಾ ನದಿಗಳನ್ನು ಸೇವಿಸಿದನು. ಇವುಗಳಲ್ಲಿ ಮೊದಲ ಎರಡು ಗಂಗೆಯ ಕವಲುಗಳೇ ಆಗಿವೆ. ಷಟ್ ಪ್ರಯಾಗಗಳಲ್ಲಿ ನಂದಾ ಹಾಗೂ ಅಲಕನಂದಾ ಸಿಗುತ್ತವೆ. ಆಗ ಅಪರನಂದಾ ಇದ್ದುದು ಈಗ ಅಲಕನಂದಾ ಆಗಿರಬಹುದು. ಇಲ್ಲಿಂದ ಪೂರ್ವದ ಪ್ರದೇಶಗಳನ್ನು ವ್ಯಾಸರು ಉದಾಹರಿಸುತ್ತಾರೆ. ಈಗಿನ ಪೂರ್ವ ಹಾಗೂ ಪಶ್ಚಿಮ ಬಂಗಾಲಗಳನ್ನು ( ಅಂಗ- ವಂಗ) ಕಳಿಂಗ ದೇಶಗಳ ಪವಿತ್ರವಾದ ಎಲ್ಲಾ ತೀರ್ಥಗಳನ್ನು, ಆಲಯಗಳನ್ನೂ ವಿಧಿವತ್ತಾಗಿ ಸಂದರ್ಶಿಸಿದನು ಪಾರ್ಥ. ಇಲ್ಲಿ ವ್ಯಾಸರ ಮಾತು ವಿಧಿವತ್ತಾಗಿ ಎಂದಿದೆ. ಕ್ಷೇತ್ರಗಳನ್ನು ಆಯಾ ವಿಧಿಯಲ್ಲೇ ಸಂದರ್ಶಿಸಬೇಕು. ಅದು ಬಿಟ್ಟು ಉದ್ಯಾನಗಳನ್ನೋ, ಜಲಪಾತಗಳನ್ನೋ ನೋಡಿದಂತೆ ಅಲ್ಲಿ ಸುಖ ಅನುಭವಿಸುವ ದೃಷ್ಟಿಕೋನ ಹೊಂದಿರಬಾರದು. ಅಲ್ಲಿಯವರೆಗೂ ಹಿಂಬಾಲಿಸುತ್ತಿದ್ದ ಬ್ರಾಹ್ಮಣರು ಕಳಿಂಗದ ದ್ವಾರಪ್ರದೇಶದಲ್ಲಿ ಅವನ ಅನುಮತಿ ಪಡೆದು ಹಿಂದಿರುಗಿದರು.ಇದು ಈಗಿನ ಒರಿಸ್ಸಾದ ಒಂದು ಜಿಲ್ಲೆ. ಅಲ್ಲಿ ಕೆಲವೇ ಮಂದಿ ಯಾತ್ರಿಕರ ಜೊತೆ ತನ್ನ ಪ್ರಯಾಣವನ್ನು ಮುಂದುವರೆಸುತ್ತಾನೆ ಅರ್ಜುನ. ಬಹುಶಃ ಆ ಪ್ರದೇಶವು ಸಾಮಾನ್ಯರಿಗೆ ಅಷ್ಟು ಸುರಕ್ಷಿತವಾಗಿರಲಿಲ್ಲವೋ ಅಥವಾ ಆಚಾರಹೀನವಾಗಿತ್ತೋ ಏನೋ!_

*ಮಹೇಂದ್ರಪರ್ವತಂ ದೃಷ್ಟ್ವಾ ತಾಪಸೈರುಪಶೋಭಿತಮ್ ಸಮುದ್ರತೀರೇಣ ಶನೈರ್ಮಣಲೂರಂ ಜಗಾಮ ಹ*

_ಆ ಪಾರ್ಥನು ಕಳಿಂಗವನ್ನು ದಾಟಿ ಅನೇಕ ಪ್ರದೇಶಗಳನ್ನು-ಆಲಯಗಳನ್ನೂ ಧರ್ಮಯುಕ್ತವಾಗಿ ನೋಡುತ್ತಾ ಕಡಲತೀರದಲ್ಲೇ ಮುಂದುವರೆದು ಮಹೇಂದ್ರಪರ್ವತವನ್ನು ಸಂದರ್ಶಿಸಿ ಮಣಲೂರಿಗೆ ಹೋದನು.ಈ ಮಹೇಂದ್ರ ಪರ್ವತವೂ ಒಡಿಸ್ಸಾ ಹಾಗೂ ಆಂಧ್ರದ ಗಡಿ ಭಾಗದಲ್ಲಿ ಬರುವಂತಹದು. ನಂತರ ಉಲ್ಲೇಖಿಸಿದ ಮಣಲೂರು ಕೇರಳದ ತ್ರಿಶೂರ್ ಜಿಲ್ಲೆಯ ಒಂದು ಪಟ್ಟಣ‌. ಬಹುಶಃ ಸಮುದ್ರ ಮಾರ್ಗದಲ್ಲಿ ಈಗಿನ ಕೊಂಕಣ ರೈಲ್ವೆಯಂತೆ ಅವನ ಪಯಣ ಸಾಗಿರಬೇಕು. ಅಲ್ಲಿ ಯಾರನ್ನು ವರಿಸುತ್ತಾನೆಂಬುದನ್ನು ಮುಂದೆ ನೋಡೋಣ....._


http://shreenidhiabhyankar.blogspot.in/

🍂📕 ಸಂಗ್ರಹ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩