ಕಿರಾತಾರ್ಜುನೀಯದ ಒಂದು ಸಾಯಕ

🌸 ಕಿರಾತಾರ್ಜುನೀಯದ ಒಂದು ಸಾಯಕ🌸

*असक्तमाराधयतो यथायथं विभज्य भक्त्या समपक्षपातया | गुणानुरागादिव सख्यमीयिवान् न बाधतेस्य त्रिगण: परस्परम् ||*

_ರಾಜನೇ, ದುರ್ಯೋಧನನು ಈಗ ಮೊದಲಿನಂತಿಲ್ಲ. ಸಮದೃಷ್ಟಿಯಲ್ಲಿ ವ್ಯವಹರಿಸುತ್ತಿದ್ದಾನೆ. ಯಾವ ಸಂದರ್ಭದಲ್ಲಿ, ಯಾರೊಡನೆ, ಹೇಗೆ ವ್ಯವಹರಿಸಬೇಕೋ ಇದೆಲ್ಲವನ್ನೂ ಅರಿತು ಯೋಗ್ಯ ರೀತಿಯಲ್ಲಿ ವರ್ತನೆ ತೋರುತ್ತಿರುವನು. ಯಾವುದು ಸರಿ ಯಾವುದು ತಪ್ಪು ಎಂದು ವಿಭಾಗ ಮಾಡಿ ತಪ್ಪು ಮಾಡಿದವರಲ್ಲಿ ಪಕ್ಷಪಾತ ಮಾಡದೇ ದಂಡಿಸುತ್ತಿದ್ದಾನೆ, ನಿರಪರಾಧಿಗಳನ್ನು ಪುರಸ್ಕರಿಸುತ್ತಿರುವನು. ಇಂತಹ ಅವನ ಗುಣಾನುರಾಗವು ಧರ್ಮಾರ್ಥಕಾಮಗಳೆಂಬ ತ್ರಿಗುಣಗಳ ಸಖ್ಯವನ್ನು ಬೆಳೆಸಿದೆ.ಅವು ಯಾವ ರೀತಿಯಲ್ಲೂ ಅವನಿಗೆ ಬಾಧಕವಾಗಿಲ್ಲ. ಯಾವ ಕಾಲದಲ್ಲಿ ಧರ್ಮವನ್ನು ಸೇವಿಸುವನೋ ಆಗ ಅರ್ಥಕಾಮಗಳು ತೊಂದರೆ ನೀಡುತ್ತಿಲ್ಲ. ಯಾವ ಸಮಯದಲ್ಲಿ ಅರ್ಥವನ್ನು ಸಂಗ್ರಹಿಸುತ್ತಿರುವನೋ ಆಗ ಧರ್ಮಕಾಮಗಳು ಪೀಡಿಸುತ್ತಿಲ್ಲ. ಯಾವಾಗ ಕಾಮವನ್ನು ಅನುಸರಿಸುವನೊ ಆಗ ಅರ್ಥ ಧರ್ಮಗಳು ತೊಂದರೆ ಕೊಡುತ್ತಿಲ್ಲ. ಹೀಗೆ ಮೂರನ್ನೂ ಸರಿದೂಗಿಸಿಕೊಂಡು ಮನುವಿನ ಧರ್ಮಶಾಸ್ತ್ಕಕ್ಕನುಸಾರವಾಗಿ ಉತ್ತಮ ರಾಜರಿಗೆ ಯೋಗ್ಯವಾದ ವರ್ತನೆ ತೋರುತ್ತಿರುವನು. ಇವೆಲ್ಲವೂ ನಿಧಾನಕ್ಕೆ ಪ್ರಜೆಗಳ ಸಾಮಂತರ ಉಳಿದ ರಾಜರ ವಿಶ್ವಾಸವನ್ನು ಅವನು ಸಂಪಾದಿಸುವಲ್ಲಿ ಸಹಾಯಕವಾಗಿವೆ. ಕವಿಯ ಮಾತು ನಮ್ಮ ಜೀವನಕ್ಕೂ ಅನ್ವಯಿಸುತ್ತದೆ. ಧರ್ಮದ ಕೆಲಸಗಳಲ್ಲಿ ತೊಡಗಿದಾಗ ನಮ್ಮವರು ಪರಿಚಿತರು ಗೆಳೆಯರು ಮುಂತಾದ ಮೋಹರೂಪವಾದ ಕಾಮವು ನಮ್ಮಲ್ಲಿ ಹುಟ್ಟಬಾರದು. ಹಾಗೆಯೇ ನಮ್ಮ ಆರ್ಥಿಕ ಸ್ಥಿತಿಯನ್ನು ನೋಡಿಯೇ ದಾನ, ಸಹಾಯ, ಸಹಕಾರ, ಕರುಣೆ ತೋರಬೇಕೇ ಹೊರತು ಸುಮ್ಮನೆ ಮನಬಂದಂತೆ ಅಲ್ಲ. ಇನ್ನು ಯಾವಾಗ ಅರ್ಥ ಸಂಚಯ ಮಾಡುವೆವೋ ಅದು ಧರ್ಮವನ್ನು ಅತಿಕ್ರಮಿಸಿ ಹೋಗಬಾರದು. ಅಂದರೆ ನ್ಯಾಯಮಾರ್ಗದಲ್ಲಿಯೇ ಅರ್ಥದ ಅರ್ಜನೆ ಇರಬೇಕು. ಹಾಗೆಯೇ ಅದು ಕಾಮಕ್ಕೆ ಪೂರಕವಾಗಬೇಕು. ನಮ್ಮ ಬೇಕುಬೇಡಗಳೆಂಬ ಬಯಕೆಗಳ ಪೂರೈಕೆಗೆ ಈ ಧನಸಂಚಯ ಸಹಕಾರಿ ಆಗಬೇಕು. ಇಲ್ಲದಿರೆ ಅದು ಸಾಲ ಮಾಡುವುದಕ್ಕೆ ಕಾರಣವಾಗುತ್ತದೆ. ಮೂರನೆಯದಾದ ಕಾಮದ ಪೂರೈಸುವಿಕೆ ಮನದ ಮೂಲಕ ದಶೇಂದ್ರಿಯಗಳ ಸಂತೋಷಗೊಳಿಸುವಿಕೆ, ಇದು ಧರ್ಮದ ಹಾದಿಯಲ್ಲೇ ನಡೆಯಬೇಕು. ಕಾಮವನ್ನು ಪೂರೈಸಲು ಅಧರ್ಮದ ಮೊರೆ ಹೊಕ್ಕಾಗ ಸಂಘರ್ಷ ಪ್ರಾರಂಭವಾಗುವುದು. ಹಾಗೆಯೇ ಅರ್ಥದ ಸಂಗ್ರಹಕ್ಕೆ ಅನುಸಾರವಾಗಿ ಕಾಮದಲ್ಲಿ ಪ್ರವರ್ತಿಸಬೇಕು. ಇಲ್ಲದಿದ್ದರೆ ಋಣದಲ್ಲಿಯೇ ಬದುಕು ಸಾಗುವುದು. ಈ ಮೂರು ಗುಣಗಳು ಪರಸ್ಪರ ಪೂರಕವಾಗಿದ್ದಾಗ ಯಾವ ಸಂಘರ್ಷವೂ ಉಂಟಾಗದೆ ಸಂತಸದ ಬದುಕು, ಮೂರರ ಸಹಕಾರದಿಂದ ನಾಲ್ಕನೆಯ ಮೋಕ್ಷದ ದಾರಿ ತೆರೆದುಕೊಳ್ಳುವುದು. ಆದರೆ ಇಂತಹ ಆಚರಣೆ ಬಹಳ ಕಷ್ಟಸಾಧ್ಯ. ಕವಿಯ ಆಶಯ ನಮಗೆ ಮಾರ್ಗದರ್ಶಕ._

📜 ಸಂಗ್ರಹ ✍ ಶ್ರೀನಿಧಿ ಅಭ್ಯಂಕರ್.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕಿರಾತಾರ್ಜುನೀಯ ಪರಿಚಯ

ಪ್ರತಿಮಾ ನಾಟಕ

ಸಂಸ್ಕೃತ ವಿಶೇಷ ಶ್ಲೋಕಗಳು ೩