ಪದಶಕ್ತಿ ೮
📝📕ಪದ ಶಕ್ತಿ ೮📕📝
*ನಾರಾಯಣ*
_ಹೆಸರು ನೋಡಿದ ಕೂಡಲೇ ವಿಷ್ಣು ಎಂಬುದು ಪ್ರಸಿದ್ಧ. ವಿಷ್ಣುವಿಗಾದರೂ ಹೇಗೆ ಈ ಹೆಸರು ಅನ್ವಯ ಆಗುವುದೆಂದು ನೋಡುವುದಾದರೆ ಜಗದ ಸೃಷ್ಟಿಗೆ ಕಾರಣವಾದ ನೀರಿನಲ್ಲಿ ಯಾರು ಮೊದಲು ವಾಸವಾಗಿದ್ದನೋ ಅವನೇ ನಾರಾಯಣ. ನಾರ ಎಂದರೆ ನೀರು. ಅದೇ ಮನೆ ಕ್ಷೀರಸಮುದ್ರ ಶಾಯಿಯಾಗಿ. ಅಯನ ಶಬ್ದಕ್ಕೆ ಹತ್ತಕ್ಕೂ ಹೆಚ್ಚು ಅರ್ಥಗಳಿರುವ ಕಾರಣ ಈ ಪದಕ್ಕೆ ಅನೇಕ ಅರ್ಥಗಳು ಹೊಂದಿಕೆಯಾಗುತ್ತವೆ. ಜೀವಿಗಳಿಗೆ ಅಶ್ರಯಭೂತನೆಂದೂ, ಜಗತ್ತನ್ನು ಪಾಲಿಸುವವನೆಂದೂ, ಜಗದ ಸೃಷ್ಟಿಗೆ ಮೂಲಕಾರಣನೆಂದೂ ಹೀಗೆ ಅನೇಕ ಅರ್ಥಗಳಿವೆ. ಸಾಹಿತ್ಯದಲ್ಲಿ ಇದು ಧಾರಾಳವಾಗಿ ಬಳಕೆಯಾದ ಪದ._
ಗಿರಿಗಳಲಿ ಹೇಮಾದ್ರಿ ಘನ ಸಾ
ಗರದೊಳಗೆ ದುಗ್ಧಾಬ್ಧಿ ದೇವಾ
ಸುರನರೋರಗ ನಿಕರದಲಿ ನಾರಾಯಣನೆ ಮಿಗಿಲು
ಅರಸ ಸಂಶಯವೇಕೆ ಕೃಷ್ಣನ
ಚರಣವನು ತೊಳೆ ರಾಜಸೂಯಾ
ಧ್ವರಕೆ ಪೂಜಾಪಾತ್ರನೀ ಹರಿಯೆಂದನಾ ಭೀಷ್ಮ (ಸಭಾ ಪರ್ವ, ೯ ಸಂಧಿ, ೩ ಪದ್ಯ)
_ಕುಮಾರವ್ಯಾಸನ ಭಾರತದಲ್ಲಿ ಕೃಷ್ಣನಿಗೆ ಅಗ್ರಪೂಜೆ ಏತಕೆ ಎಂಬ ಶಿಶುಪಾಲನ ಪ್ರಶ್ನೆಯ ಸಂದರ್ಭದಲ್ಲಿ ಉತ್ತರರೂಪವಾಗಿ ಈ ಪದ್ಯ ಬಂದಿದೆ. ಪರ್ವತಗಳಲ್ಲಿ ಹಿಮಾಲಯ ಶ್ರೇಷ್ಠ, ಸಾಗರಗಳಲ್ಲಿ ಕ್ಷೀರಸಾಗರ ಶ್ರೇಷ್ಠ, ಅಂತೆಯೇ ದೇವ ಮಾನವಾದಿ ಸಕಲ ಜೀವಿಗಳಲ್ಲಿ ನಾರಾಯಣನೇ ಮಿಗಿಲೆಂದು ಭೀಷ್ಮನಾಡುವ ಮಾತು._
*नारायणाय परिपूर्णगुणार्णवाय*
ಈ ಧ್ಯಾನ ಶ್ಲೋಕದಲ್ಲಿ ಗುಣಗಳಿಂದ ತುಂಬಿದ ಸಮುದ್ರದಂತೆ ಎಂದು ವರ್ಣಿಸಿದ್ದಾರೆ. ನಾರಾಯಣನನ್ನು ನೆನೆಯುತ್ತಾ ಪಾಪಸಮುದ್ರದಿಂದ ಪಾರಾಗೋಣ.
http://shreenidhiabhyankar.blogspot.in/
ಸಂಗ್ರಹ ಶ್ರೀನಿಧಿ ಅಭ್ಯಂಕರ್.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ